ಅಷ್ಟೇನೂ ಮಹತ್ವದಲ್ಲ ಎಂದೇ ಪರಿಗಣಿತವಾಗಿದ್ದ ಕರ್ನಾಟಕದಲ್ಲಿನ ಎರಡು ಲೋಕಸಭಾ ಉಪಚುನಾವಣ ಕಣ ಇಂದು ಇಡೀ ರಾಜ್ಯದ ಗಮನ ಸೆಳೆದಿದೆ.
ಕಾರಣ ಕುಟುಂಬ ರಾಜಕಾರಣ ಮತ್ತು ಸ್ವ ಪ್ರತಿಷ್ಠೆ..
ಲೋಕಸಭೆಯ ಅವಧಿ ಇನ್ನೇನು ಮುಗಿಯುವುದರಲ್ಲಿದೆ. ಈ ವರ್ಷದ ಕೊನೆ ಅಥವಾ 2014 ರ ಆರಂಭದಲ್ಲಿ ಲೋಕಸಭೆ ಮಹಾ ಸಮರ ನಡೆಯುವುದು ಖಚಿತ. ಹಾಗಿದ್ದರೂ ಇಂದು ಈ ಎರಡು ಚುನಾವಣ ಕಣಗಳು ಪಡೆದುಕೊಳ್ಳುತ್ತಿರುವ ಕಾವು ಮಾತ್ರ ಕಡಿಮೆಯಾಗಿಲ್ಲ.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಳೆದ ಒಂದು ದಶಕದಿಂದ ಕುಟುಂಬ ದ್ವೇಷ ರಾಜಕಾರಣದ ಅಖಾಡವಾಗಿ ಬೆಳೆದು ಬಂದಿದೆ. ಒಂದೆಡೆ ಡಿ.ಕೆ. ಶಿವಕುಮಾರ್ ಮತ್ತೊಂದೆಡೆ ದೇವೇಗೌಡ ಕುಟುಂಬ. ಇಲ್ಲಿ ಅಭ್ಯರ್ಥಿಗಳು ಯಾರೇ ಆಗಿದ್ದರೂ ನಿಜವಾದ ಸ್ಪರ್ಧೆ ಇರುವುದು ಮಾತ್ರ ದೇವೇಗೌಡ ಡಿಕೆಶಿ ಮಧ್ಯೆ. ಪ್ರತಿ ಚುನಾವಣೆಯನ್ನೂ ತನ್ನ ಕುಟುಂಬದ ಸ್ವಪ್ರತಿಷ್ಠೆಯಾಗಿ ಪರಿಗಣಿಸಿರುವ ಎರಡೂ ಬಣಗಳು ಮತ್ತೆ ಕಾಳಗಕ್ಕೆ ಅಣಿಯಾಗಿವೆ. ಬಿಜೆಪಿಯದು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಪಾತ್ರ. ಅದೇ ಕಾರಣಕ್ಕೆ ಬಿಜೆಪಿ ಮೈತ್ರಿಯ ನೆಪದಲ್ಲಿ ಶಸ್ತ್ರ ಸನ್ಯಾಸ ಮಾಡಿದೆ. ಬೆಂಗಳೂರು ಗ್ರಾಮಾಂತರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಾಂಗ್ರೆಸ್, ಮೂರು ಜೆ.ಡಿ.ಎಸ್ ಶಾಸಕರನ್ನು ಹೊಂದಿ ಸಮಬಲ ಸಾಧಿಸಿದ್ದರೂ ಬಿಜೆಪಿ ಹಾಗು ಎಸ್ಪಿ ಶಾಸಕರಿರುವ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನವನ್ನು ಪಡೆದಿದ್ದನ್ನು ಗಮನಿಸಿದರೆ ಒಟ್ಟಾರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಕಂಡುಬರುತ್ತದೆ. ಆದರೆ ಎದುರಾಳಿ ಡಿಕೆಶಿ ಕುಟುಂಬ ಈ ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪರಿಗಣಿಸಿದ್ದು ಜೆಡಿಎಸ್ ಅನ್ನು ಭಯಗೊಳ್ಳುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
ಎರಡೂ ಕ್ಷೇತ್ರಗಳು ಜೆಡಿಎಸ್ ವಶದಲ್ಲಿದ್ದ ಕ್ಷೇತ್ರಗಳು. ಹಾಗಾಗಿ ಇಲ್ಲಿ ಜೆಡಿಎಸ್ ಗೆ ಗೆಲುವು ಅನಿವಾರ್ಯ. ಕಾಂಗ್ರೆಸ್ಸ್ ಗೆ ಇಲ್ಲಿ ಕಳೆದುಕೊಳ್ಳುವುದೇನಿಲ್ಲದಿದ್ದರೂ ರಾಜ್ಯದಲ್ಲಿ ಅವರದೇ ಪಕ್ಷದ ಸರಕಾರವಿರುವ ಕಾರಣ ಗೆಲ್ಲಲೇಬೇಕಾದ ಒತ್ತಡವಿದೆ. ಅದೇ ಕಾರಣಕ್ಕೆ ಸರ್ಕಾರಕ್ಕೆ ಸರ್ಕಾರವೇ ಚುನಾವಣಾ ಪ್ರಚಾರಕ್ಕೆ ಧುಮುಕಿದೆ. ಈ ತೀವ್ರ ಪೈಪೋಟಿಯಿಂದ ತುಸು ವಿಚಲಿತವಾಗಿರುವ ಜೆಡಿಎಸ್ ಗೆ ಬಿಜೆಪಿಯ ಮೈತ್ರಿ ಹಸ್ತ ನಿಜಕ್ಕೂ ಅನಿವಾರ್ಯವಾಗಿತ್ತು ಎನ್ನಬಹುದು. ಇನ್ನು ರಾಷ್ಟ್ರೀಯ ಪಕ್ಷ ಬಿಜೆಪಿಯದ್ದು ಇಲ್ಲಿ ಅಸಹಾಯಕ ಪರಿಸ್ಥಿತಿ. ಸ್ಪರ್ಧಿಸಿ ಮಾನ ಕಳೆದುಕೊಳ್ಳುವುದಕ್ಕಿಂತ ಸ್ಪರ್ಧಿಸದೆ ಇರುವುದು ಲೇಸೆಂದು ನಿರ್ಧರಿಸಿದಂತಿದೆ ರಾಜ್ಯ ಬಿಜೆಪಿ ಹೈಕಮಾಂಡ್. ವಿಧಾನಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬರದ ಬಿಜೆಪಿ ಮೈತ್ರಿಗೆ ಮುಂದಾಗುವ ಮೂಲಕ ಮತ್ತೊಂದು ಅವಮಾನವನ್ನು ತಪ್ಪಿಸುವ ಪ್ರಯತ್ನ ನಡೆಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ಮೋದಿ ಮಂತ್ರದೊಂದಿಗೆ ಅಖಾಡಕ್ಕಿಳಿಯುವ ಬಿಜೆಪಿಗೆ ಈ ಉಪಚುನಾವಣೆಯಲ್ಲಿ ಸೋಲುವುದು ಖಂಡಿತ ಬೇಕಿಲ್ಲ. ಅಂತೂ ಇಂತೂ ಮೈತ್ರಿಯಾಗಿದೆ. ಒಬ್ಬರಿಗಿದು ಅನಿವಾರ್ಯವಾದರೆ, ಮತ್ತೊಬ್ಬರದು ಅಸಹಾಯಕ ಸ್ಥಿತಿ.
ಇನ್ನಂತೂ ಕಾಯುವ ಸಮಯ. ಜೆಡಿಎಸ್ ನ ಭದ್ರಕೋಟೆಗಳಿಗೆ ಕಾಂಗ್ರೆಸ್ಸ್ ಲಗ್ಗೆ ಹಾಕುವುದೋ ಇಲ್ಲವೋ ಎಂಬುದಕ್ಕೆ ಫಲಿತಾಂಶದವರೆಗೆ ಕಾಯಬೇಕು. ಕಾದು ನೋಡೋಣ.
No comments:
Post a Comment