(ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರಿಗೊಂದು ಬಹಿರಂಗ ಪತ್ರ.)
ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ 'ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್' ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ.
ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ 'ಕೇಸರೀಕರಣ' ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ 'ಕೇಸರಿ' ಎಂಬ ಕಲರ್ ಕೋಡ್ ಕೊಟ್ಟವರು ಯಾರು?... ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ 'ಭಾರತೀಯ' ದೊರೆ 'ಪೌರವ'ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಧರ್ಮಾಂಧ ಔರಂಗಜೇಬ, ಟಿಪ್ಪು ಸುಲ್ತಾನ್ ನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ 'ಹಸಿರೀಕರಣ'ವಾಗದೆ?!!!! ಅದಕ್ಕೇಕೆ ನೀವು 'ಹಸಿರು' ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೆಸರೀಕರಣವಾಗುತ್ತದೆ?
ಹೈದರಾಲಿಯನ್ನು ಶತ್ರುವೆಂದು ಬಿಂಬಿಸಲಾಗಿದೆ ಎಂದಿರುವ ನೀವು ಅದು ಹೈದರಾಲಿಯ ಬಗೆಗಿನ ಪಾಠವೋ ಅಥವಾ ರಾಣಿ ಚೆನ್ನಮ್ಮನ ಬಗೆಗಿನ ಪಾಠವೋ ಎಂಬುದನ್ನು ಸ್ಪಷ್ಟಪಡಿಸಿ. ನನಗೆ ಗೊತ್ತಿರುವಂತೆ ಅದು ರಾಣಿ ಚೆನ್ನಮ್ಮನ ಕುರಿತ ಪಾಠವಾಗಿರುವುದರಿಂದ ಅವಳ ವಿರುದ್ಧ ಯುದ್ಧ ಮಾಡಿ ಸೋತ ಹೈದರಾಲಿ 'ಶತ್ರು'ವೇ ಆಗುತ್ತಾನೆ ಹೊರತು ಮಿತ್ರನಾಗುವುದಿಲ್ಲ. ಒಂದು ಕಲ್ಪನೆಯ ಉದಾಹರಣೆ ಕೊಡುವುದಾದರೆ ಒಂದು ವೇಳೆ ಆ ಕಾಲಕ್ಕೆ ಚೆನ್ನಮ್ಮ ಹಾಗು ನನ್ನ ನಡುವೆ ಯುದ್ದವಾಗಿದ್ದರೆ, ಆ ಘಟನೆಯನ್ನು ಚೆನ್ನಮ್ಮ ಕುರಿತ ಪಠ್ಯದಲ್ಲಿ ಅಳವಡಿಸುವಾಗ ನನ್ನನ್ನು 'ಶತ್ರು' ಎಂದೇ ಸಂಭೋಧಿಸಲಾಗುತ್ತಿತ್ತು. ಅದರಲ್ಲಿ ಎದುರಾಳಿ ಮುಸ್ಲಿಂಮನೋ, ಹಿಂದುವೋ ಎಂಬ ಪ್ರಶ್ನೆ ಬರುವುದಿಲ್ಲ. ಇನ್ನು ಚೆನ್ನಮ್ಮನ ಕುರಿತ ವಿಸ್ಕ್ರುತವಾದ ಪಾಠದಲ್ಲಿ 'ಮಂಗಳೂರಿನ ಇಗರ್ಜಿಯೊಂದು ರಾಣಿ ಚೆನ್ನಮ್ಮಾಜಿ ದಾನವಿತ್ತ ನಿವೇಶನದಲ್ಲಿದೆ' ಎಂಬುದು ಅನಗತ್ಯ ಎನಿಸುವುದಿಲ್ಲ. ಅದಕ್ಕೆ ಸಾಕ್ಷ್ಯವಿಲ್ಲ, ಅದು ಸುಳ್ಳು ಎಂಬುವುದಾದರೆ ಮಾತ್ರ ಅದು ಅನಗತ್ಯವಾಗುತ್ತಿತ್ತು. ಅದು ಸತ್ಯವಾದ ಕಾರಣ ನಿಮಗೆ 'ಅನಗತ್ಯ'ವಾಗಿ ಕಂಡು ಬಂದಿದೆ. ಯಾಕೆಂದರೆ ನಿಮಗೆ 'ಸುಳ್ಳಿನ ಇತಿಹಾಸ'ವೇ ಇಷ್ಟವೆನಿಸಿರಬೇಕು.
ಈ ಹಿಂದೆ ಪಠ್ಯಗಳಲ್ಲಿ ರಾಮ-ರಹೀಮ ಎಂಬ ಹೆಸರುಗಳನ್ನೂ ಬಳಸಲಾಗುತ್ತಿತ್ತು ಆದರೆ ಈಗಿನ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಕೇವಲ ಹಿಂದೂ ಕುಟುಂಬವನ್ನಷ್ಟೇ ವಿವರಿಸಲಾಗಿದೆ ಎಂದಿದ್ದೀರಿ. ಅಂದರೆ ನಿಮ್ಮ ಮಾತಿನ ಅರ್ಥ ರಾಮನ ಜತೆ ರಹೀಮನನ್ನೂ ಸೇರಿಸಬೇಕು ಎಂದು. ಆದರೆ ಭಾರತದಲ್ಲಿ ರಾಮ ರಹೀಮ ಒಂದೇ ಕುಟುಂಬದಲ್ಲಿ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ? ಅಲ್ಲದೆ 'ಕುಟುಂಬ, ಸಮುದಾಯ ಮತ್ತು ಸಮಾಜ' ಎಂಬ ಪಾಠದಲ್ಲಿ ಬಹು ಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸದೆ ಅಲ್ಪಸಂಖ್ಯಾತ ಸಮುದಾಯದ ಕುಟುಂಬವನ್ನು ವಿವರಿಸಲಾಗುವುದೇ?
ಇನ್ನು ಪುಟ ೬೭ ರ ಮರು ಮತಾಂತರದ ಬಗ್ಗೆ. 'ಮತಾಂತರವೆಂದರೆ ರಾಷ್ಟ್ರಾಂತರ' ಎಂದು ಸಾವರ್ಕರರು ಬಹಳ ಹಿಂದೆಯೇ ಹೇಳಿದ್ದರು. ಇತ್ತೀಚಿಗೆ ಇಂಡೋನೇಷಿಯ ಧರ್ಮದ ಆಧಾರದ ಮೇಲೆ ವಿಭಜನೆ ಹೊಂದಿದ್ದನ್ನು ನೀವು ಮರೆತಿರಲಾರಿರಿ. ಹಾಗಿರುವಾಗ ಪುಟ ೬೭ ರಲ್ಲಿ ಮರು ಮತಾಂತರವನ್ನು ದೇಶಪ್ರೇಮವೆಂದು ಹೇಳಿರುವುದು ಸರಿಯಾಗಿಯೇ ಇದೆ ಅಲ್ಲವೇ?
ಇನ್ನು'ವೇದಕಾಲದ ಭಾರತ' ಎಂಬ ಪಾಠದಲ್ಲಿ ವೇದಗಳು ಹಾಗು ವೈದಿಕ ಆಚರಣೆಗಳ ಬಗ್ಗೆ ಬರೆಯದೆ ನಮ್ಮ-ನಿಮ್ಮ ಬಗ್ಗೆ ಬರೆಯಲಾಗುವುದೇ.. ಪಾಠದ ಹೆಸರೇ 'ವೇದಕಾಲದ ಭಾರತ' ಎಂದಿರುವಾಗ ನಿಮ್ಮದೇಕೆ ಕೊಂಕುನುಡಿ ಎಂದು ಅರಿವಾಗಲಿಲ್ಲ.
8 ನೇ ತರಗತಿಯ ಸಮಾಜ ವಿಜ್ಞಾನವನ್ನು ತೆರೆಯುತ್ತಿದ್ದಂತೆ ಆಘಾತವಾಗುತ್ತದೆ ಎಂದಿದ್ದೀರಿ.! ಯಾಕೆ ಅದರಲ್ಲಿ ಯಾವುದಾದರೂ ಚೇಳು, ವಿಷಜಂತುಗಳಿತ್ತೆ?! ಅದರಲ್ಲಿರುವ 'ಅಖಂಡ ಭಾರತ'ದ ನಕ್ಷೆ ನೋಡಿ ನಿಮಗೆ ಆಘಾತವಾಗಿದೆ. ಪ್ರಾಚೀನ ಭಾರತದ ಇತಿಹಾಸ ನೋಡಿದರೆ ನಮ್ಮ ಭಾರತ ಆ ನಕ್ಷೆಯಲ್ಲಿರುವಂತೆಯೇ ಇತ್ತು. ಅದರಲ್ಲೇನೂ ಹೊಸದಿಲ್ಲ. ಹಿಂದಿನ ಭಾರತ ಹೇಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸುವ ಸಲುವಾಗಿ ಆ ನಕ್ಷೆಯನ್ನು ಹಾಕಲಾಗಿದೆ. ಅದರಲ್ಲಿರುವ ಪಾಕಿಸ್ತಾನ, ಬಾಂಗ್ಲಾ, ಬರ್ಮಾ, ಬೂತಾನ್, ಜೊತೆಗೆ ಮಹಾಭಾರತ ಕಾಲದ ಗಾಂಧಾರ ದೇಶ (ಈಗಿನ ಅಫ್ಘಾನಿಸ್ತಾನ), ಬ್ರಹ್ಮ ದೇಶ, ಶ್ಯಾಮ ದೇಶ ಗಳು ಪ್ರಾಚೀನ ಭಾರತದ ಅಂಗಗಳೇ.. ಅಲ್ಲಿ ಅಮೇರಿಕ, ಜಪಾನ್, ಜರ್ಮನಿಗಳಿದ್ದರೆ ನಿಮ್ಮ ಆಘಾತಕ್ಕೊಂದು ಅರ್ಥವಿರುತ್ತಿತ್ತು..!
ಇನ್ನು ಪ್ರಜಾಪ್ರಭುತ್ವ ಎಂಬ ಅಧ್ಯಾಯದಲ್ಲಿ ಕಮ್ಯುನಿಷ್ಟ್ ಸರಕಾರಗಳ ಬಗ್ಗೆ ಹೇಳಿರುವುದು ಸರಿಯಾದುದೇ ಆಗಿದೆ.. ಹಾಗೆಯೇ ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಚರ್ಚಿಸಲು ಹೇಳಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ರಾಜಕೀಯ ನಾಯಕರುಗಳು ತಮ್ಮ ಸ್ವಾರ್ಥಕ್ಕಾಗಿ ಹುಟ್ಟು ಹಾಕುವ ಪ್ರಾದೇಶಿಕ ಪಕ್ಷಗಳು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುತ್ತದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ಹಾಗು ಹಲವಾರು ಸಕಾರಾತ್ಮಕ ಅಂಶಗಳ ಕಾರಣದಿಂದ ದ್ವಿಪಕ್ಷ ವ್ಯವಸ್ಥೆ ತುಂಬಾ ಉತ್ತಮವಾದದ್ದು. ಉದಾಹರಣೆಗೆ ಬೇಕಾದರೆ ವಿಶ್ವದ ದೈತ್ಯ 'ಅಮೇರಿಕ' ವನ್ನೇ ತೆಗೆದುಕೊಳ್ಳಿ. ದ್ವಿಪಕ್ಷ ವ್ಯವಸ್ಥೆಯಲ್ಲಿ ಈ ಮೈತ್ರಿ ಸರಕಾರಗಳ ಜಂಜಾಟ ಇರುವುದಿಲ್ಲ, ಕಚ್ಚಾಟಗಳಿರುವುದಿಲ್ಲ, ಅಭಿವೃದ್ದಿಗೆ ಯಾವುದೇ ತೊಡರುಗಳಿರುವುದಿಲ್ಲ. ಇಂತಹ ಒಂದು ದ್ವಿಪಕ್ಷ ವ್ಯವಸ್ಥೆಯ ಬಗ್ಗೆ ಭಾರತದ ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅರಿವು ಮೂಡಿಸುವ ಯತ್ನಕ್ಕೆ ನಾವು ಸಂತೋಷಪಡಬೇಕಾಗಿದೆ. ಹಾಗೆಯೇ ಅಲ್ಲಿ ಕೇಳಲಾದ 'ವಂಶಪಾರಂಪರ್ಯದ ಆಡಳಿತವನ್ನು ನೀವು ಇಷ್ಟ ಪಡುತ್ತೀರಾ?' ಎಂಬ ಪ್ರಶ್ನೆಯಲ್ಲಿ ಎಲ್ಲೂ ಕಾಂಗ್ರೆಸ್ ಅನ್ನು ಉಲ್ಲೇಖ ಮಾಡಿಲ್ಲ. ಆದರೆ ಆ ಪ್ರಶ್ನೆ ನೇರವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದಂತಿದೆ ಎಂದು ನೀವು ಭಾವಿಸಿದರೆ ನೀವು ವಂಶಪಾರಂಪರ್ಯದ ಆಡಳಿತವನ್ನು ಇಷ್ಟಪಡುತ್ತೀರೆಂದಾಯಿತು.
ಈ ಪಠ್ಯಗಳನ್ನು ಓದಿದರೆ ಮಕ್ಕಳು ಮತೀಯವಾದಿಗಳಾಗುತ್ತಾರೆ ಎಂದಿದ್ದೀರಿ. ಆದರೆ ಅದು ಇಲ್ಲಿರುವ ಯಾವ ಅಂಶಗಳಿಂದ ಎಂದು ತಿಳಿಯಲಿಲ್ಲ. ಯಾಕೆಂದರೆ ಇಲ್ಲಿ ಯಾವುದೇ ಒಂದು ಧರ್ಮದ ನಿಂದನೆಯಾಗಲಿ, ಮತ್ತೊಂದು ಧರ್ಮದ ವೈಭವೋಪೇತ ವರ್ಣನೆಯಾಗಲೀ ಇಲ್ಲ. ಬದಲಾಗಿ ಇಲ್ಲಿ ಭಾರತೀಯ ಸಂಸ್ಕೃತಿಯ ವರ್ಣನೆ ಇದೆ, ಭವ್ಯ ಪರಂಪರೆಯ ಸಾಲುಗಳಿವೆ, ಪ್ರಾಚೀನ ಭಾರತದ ಘಮವಿದೆ, ಸ್ವಾತಂತ್ರ್ಯ ಸಂಗ್ರಾಮದ ನೈಜ್ಯ ಚಿತ್ರಣಗಳಿವೆ. ಒಟ್ಟಾರೆಯಾಗಿ ಮಕ್ಕಳಿಗೆ ಕಲ್ಪನಾರಹಿತವಾದ 'ನೈಜ್ಯ' ಇತಿಹಾಸದ ಭೋಧೆಗಳಿವೆ. ಹಾಗಾಗಿ ಇಲ್ಲಿ ಯಾರೂ ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕಾದ, ಪ್ರತಿಭಟಿಸಬೇಕಾದ ಅಗತ್ಯ ಇಲ್ಲ. ಬದಲಾಗಿ ನಿಮ್ಮ ಮನೋಧರ್ಮದ ವಿರುದ್ಧ ನೀವೇ ಪ್ರತಿಭಟಿಸಿ. ಆಗ ನೀವು 'ಕೇಸರಿ' ಎಂದು ಕರೆಯುತ್ತಿರುವ ಬಣ್ಣವು ಶುಭ್ರವಾಗಿ ಕಂಡು ಬರುವುದು.!
ಕೊನೆ ಕುಟುಕು : ದಯವಿಟ್ಟು 'ಕೇಸರಿ'ಯನ್ನು ಪಾಷಾಣ ಎನ್ನಬೇಡಿ. ಮಕ್ಕಳು ಚಿತ್ರ ಬಿಡಿಸುವಾಗ ಪಾಪ ಹೆದರಿಕೊಂಡು 'ಕೇಸರಿ' ಬಣ್ಣವನ್ನೇ ಬಳಸದಿರಬಹುದು..!