Friday, November 15, 2013

ಚಾಚಾ… Oh My God… !!!


ನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಖುಷಿಯ ದಿನ..  ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ಮನೋರಂಜನಾ ಕಾರ್ಯಕ್ರಮಗಳು, ಆಟೋಟ, ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಆಹಾ ಮಕ್ಕಳಿಗೆ ಅದೇ ಚಂದ.. ಅಂದು ನಾವೆಲ್ಲಾ 'ಚಾಚಾ...' ಎನ್ನುತ್ತಾ ಶಿಕ್ಷಕರು ಕೊಟ್ಟ ಸಿಹಿ ತಿನ್ನುತ್ತಾ ಖುಷಿಪಡುತ್ತಿದ್ದೆವು.

ಆದರೆ...

ಆ ಸಿಹಿ ತಿನ್ನುತ್ತಿದ್ದ ಬಾಯಿ ಯಾಕೋ ಇಂದು ಕಹಿಯೆನಿಸುತ್ತಿದೆ.. ಮತ್ತೆ 'ಚಾಚಾ...' ಎಂದು ಕೂಗಲು ಮನಸ್ಸೇ ಬರುತ್ತಿಲ್ಲ... ನೆಹರೂ ಹೆಸರು ಕೇಳಿದರೇನೇ ಏನೋ ಒಂದು ಆಕ್ರೋಶ, ಅಸಹ್ಯತನ... ! ಅಂತಹ ಒಬ್ಬ ದುರ್ಬಲ ಪ್ರಧಾನಿಯನ್ನು ಭಾರತ ಹೊಂದಿತ್ತಾ ಎಂಬ ಬಗ್ಗೆ ಅನುಮಾನ.. ಖಂಡಿತಾ ನಾನು ಬದಲಾಗಿಲ್ಲ.. ನಾನು ಈಗಲೂ ಅದೇ ದೇಶ ಪ್ರೇಮಿ... ಆದರೆ ನನ್ನ ಜ್ಞಾನ ಬದಲಾಯಿತು. ನನ್ನ ಮುಂದಿದ್ದ ಸುಳ್ಳಿನ ಇತಿಹಾಸ ಕರಗುತ್ತಾ ಹೋದಂತೆ ನೆಹರೂ ಬಗೆಗಿನ ತೆರೆಮರೆಯ ರಹಸ್ಯಗಳು ಒಂದೊಂದಾಗಿ ಗೋಚರಿಸತೊಡಗಿದವು. ಆ ತೆರೆಯ ಹಿಂದೆ ಕಂಡದ್ದೆಲ್ಲ ಸ್ವಾರ್ಥದ, ನಾಚಿಕೆಗೇಡಿನ, ಅಸಹ್ಯಕರ, ಹೇಡಿ ಹಾಗು  ಮೂರ್ಖತನದ ಪರಮಾವಧಿ... !

ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷ ಮೊತಿಲಾಲರು ತನ್ನ ಮಗ ನೆಹರೂರವರನ್ನು ತನ್ನ ನಂತರ ಕಾಂಗ್ರೆಸ್ಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಗಾಂಧೀಯ ಬೆನ್ನು ಬಿದ್ದಿದ್ದ ಕಾಲವದು. ಹಲವು ವರ್ಷಗಳ ಒತ್ತಡದ ನಂತರ ಗಾಂಧೀ ಮೊತಿಲಾಲರ ಹಠಕ್ಕೆ ಬಗ್ಗಲೇಬೇಕಾಯಿತು. ಉಕ್ಕಿನ ಮನುಷ್ಯ ವಲ್ಲಭ ಭಾಯಿ ಪಟೇಲರಿಗೆ ಬಹುಮತ ಇದ್ದ ಹೊರತಾಗಿಯೂ ಪಟೇಲ್ ಅವರನ್ನು ತಣ್ಣಗಾಗಿಸಿ ನೆಹರೂರವರನ್ನು ಕಾಂಗ್ರೆಸ್ಸ್ ಅಧ್ಯಕ್ಷ ಗಾದಿಯಲ್ಲಿ ಕೂರಿಸಿಯೇ ಬಿಟ್ಟರು. 

ನಮ್ಮ ದೇಶದ ದುರವಸ್ಥೆಗೆ ಮೊದಲು ಕೆಸರು ಕಲ್ಲು ಬಿದ್ದಿದ್ದು ಅಲ್ಲೇ...


ಆ ಕಾಲಕ್ಕೆ ಘಟಾನುಘಟಿ ನಾಯಕರ ಶ್ರಮದಿಂದ ದೇಶವ್ಯಾಪಿ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದ ಕಾಂಗ್ರೆಸ್ಸ್ ಪಕ್ಷವನ್ನು ಮುನ್ನಡೆಸಲು ಎಳ್ಳಷ್ಟೂ ಅನುಭವ ಇಲ್ಲದ ಎಳಸು ನೆಹರೂ ಬಂದರೆ ಹೇಗಾಗಬೇಡ.. ಕೆಲ ಸಮಯದಲ್ಲೇ ನೆಹರೂ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ಸ್ ನಲ್ಲೇ ಅಸಮಾಧಾನದ ಹೊಗೆಯಾಡಲಾರಂಭಿಸಿತು. ಆದರೆ ಗಾಂಧೀಜಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನೆಹರೂರವರನ್ನು ತನ್ನ ಮಾನಸ ಪುತ್ರರನ್ನಾಗಿಸುವತ್ತ ಮುನ್ನಡೆದರು. ಪಟೇಲರಿಗೆ ಹೆಚ್ಚಿನ ಕಾಂಗ್ರೆಸ್ಸಿಗರ ಒಲವು ಇದ್ದಾಗಲೂ ಕೂಡ ಗಾಂಧೀ ನೆಹರೂರವರಿಗಾಗಿ ಪಟೇಲರನ್ನು ಸುಮ್ಮನಾಗಿಸಿದರು. ಅದು ಕೊನೆಗೆ ಪ್ರಧಾನಿ ಆಯ್ಕೆಯವರೆಗೂ ಮುಂದುವರೆಯಿತು. ಅಲ್ಲಿಗೆ ಭಾರತಕ್ಕೆ ಶನಿ ಅಧಿಕೃತವಾಗಿ ವಕ್ಕರಿಸಿಕೊಂಡಿತ್ತು. . . 


ಮುಂದೆ ಒಬ್ಬ ಪರಮಸ್ವಾರ್ಥಿ, ಸಮಯಸಾಧಕ, ಪ್ರಚಾರಪ್ರಿಯ ಅಧಿಕಾರ ವಹಿಸಿಕೊಂಡರೆ ಏನಾಗುತ್ತದೆ ಅದೇ ಆಯಿತು.. ದಿನಗಳು ಕಳೆಯುತ್ತಾ ಹೋದಂತೆ ದೇಶದ ಸ್ಥಿತಿ ಬ್ರಿಟೀಷರು ಭಾರತ ಬಿಟ್ಟು ಹೋದಾಗ ಇದ್ದದಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ಅಷ್ಟಕ್ಕೂ ಕೆಲ ಕ್ಷೇತ್ರಗಳಲ್ಲಿ ಏನಾದರೂ ಸಾಧಿಸಿದ್ದರೆ ಅದು ಪಟೇಲರ ಕಾರ್ಯವ್ಯಾಪ್ತಿಯ ಕ್ಷೇತ್ರಗಳಲ್ಲಿ ಮಾತ್ರ.

ತಮ್ಮ ಸ್ವಾರ್ಥಕ್ಕೆ ಮಾತ್ರ ಗಾಂಧಿಯನ್ನು ಬಳಸಿಕೊಂಡು ಗಾಂಧಿಯ ಮಾನಸ ಪುತ್ರನಂತಿದ್ದ ನೆಹರೂ ಗಾಂಧೀ ತತ್ವಗಳ ಬಗ್ಗೆ ಅಪಸ್ವರ ಹೊಂದಿದ್ದರು ಎಂದರೆ ಆಶ್ಚರ್ಯವಾಗಬಹುದು. ಗಾಂಧೀಜಿಯ ಗ್ರಾಮ ಸ್ವರಾಜ್ಯ, ಸ್ವದೇಶೀ ಚಿಂತನೆಗಳ ಬಗ್ಗೆ ನೆಹರೂ ತೀವ್ರ ವಿರೋಧ ಹೊಂದಿದ್ದರು. ಗಾಂಧೀ ಮರಣಾನಂತರ ಇದನ್ನು ಬಹಿರಂಗವಾಗಿ ಹೇಳಿದ್ದರು ಕೂಡ... ಹಳ್ಳಿಗಳ ಅಭಿವೃದ್ದಿಯಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬ ಗಾಂಧೀ ಚಿಂತನೆಗಳನ್ನು ನೆಹರು ಅಳವಡಿಸುವುದಿರಲಿ ಒಪ್ಪಿಕೊಳ್ಳಲೂ ತಯಾರಿರಲಿಲ್ಲ. ಅಮೇರಿಕದಂತಹ ರಾಷ್ಟ್ರಗಳೇ ಮೆಚ್ಚಿ ತನ್ನ ದೇಶದಲ್ಲಿ ಜಾರಿಗೆ ತಂದಿದ್ದ ಗಾಂಧೀಜಿಯ ಗ್ರಾಮ ರಾಜ್ಯದ ಕಲ್ಪನೆ ನೆಹರೂಗೆ ಮಾತ್ರ ಅಪಥ್ಯವಾಯಿತು. ನೆಹರೂರವರ ಅಭಿವೃದ್ದಿಯ ಪರಿಕಲ್ಪನೆ ಬೇರೆಯದೇ ಇತ್ತು. ಅದನ್ನು ಬಾಲಿಶವೆನ್ನುವುದೋ, ಮೂರ್ಖತನವೆನ್ನುವುದೋ ತಿಳಿಯದು. ಯಾಕೆಂದರೆ ಅದು ಮಾಡಿದ ಪರಿಣಾಮ ಮಾತ್ರ ನಾವು ಇಂದಿಗೂ ಅನುಭವಿಸುತ್ತಿದ್ದೇವೆ. ದೊಡ್ಡ ದೊಡ್ಡ ಯಂತ್ರಗಳು, ಕಾರ್ಖಾನೆಗಳಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮೇಲಿಂದ ಮೇಲೆ ಸಾಲ ಮಾಡಿ ವಿದೇಶಗಳಿಂದ ಯಂತ್ರಗಳನ್ನು ತಂದರು.  ನೋಡ ನೋಡುತ್ತಾ ಸಾಲದ ಮೊತ್ತ ಬೆಳೆಯುತ್ತಾ ಹೋಯಿತೇ ವಿನಃ ಯಶಸ್ಸು ಮಾತ್ರ ದಕ್ಕಲಿಲ್ಲ. ಸ್ವಾತಂತ್ರ ಸಿಗುವಾಗ ಸಾಲ ರಹಿತವಾಗಿದ್ದ ದೇಶ ಮುಂದೆ ತನ್ನ ಪ್ರತಿಯೊಬ್ಬ ಪ್ರಜೆಯ ಮೇಲೆ ಸಾಲದ ಹೊರೆ ಹಾಕುವಷ್ಟರ ಮಟ್ಟಿಗೆ ಅಭಿವೃದ್ದಿ ಹೊಂದಿತ್ತು. !! ಇಂದಿಗೂ ನಮ್ಮ ತಲೆಯ ಮೇಲೆ ಸಾಲದ ಕತ್ತಿ ಇದೆ. ಮಾನ್ಯ ನೆಹರೂರವರೇ ಇದರ ಕರ್ತ... 



ವಿಜ್ಞಾನ ಕ್ಷೇತ್ರ ಪ್ರಗತಿಯಾಗಬೇಕೆಂದು ಭಾಷಣಗಳಲ್ಲಿ ಪ್ರಸ್ತಾಪಿಸುತ್ತಿದ್ದ ನೆಹರೂರವರ ಯೋಜನೆಗಳು ಕಾರ್ಯರೂಪಕ್ಕೆ ಬರುವಾಗ ಹಾಸ್ಯಾಸ್ಪದವೆನಿಸಿತು. ವಿಜ್ಞಾನದ ಪ್ರಗತಿಗೆಂದು ಹೇಳುತ್ತಾ ನೆಹರೂ ಕೋಟಿಗಟ್ಟಲೆ ಹಣ ವ್ಯಯಿಸಿದರೇ ವಿನಃ ಯಾವುದೇ ನಿರ್ದಿಷ್ಟ ಯೋಜನೆ ಪರಿಕಲ್ಪನೆಗಳಿರಲಿಲ್ಲ. ಎಲ್ಲದಕ್ಕೂ ವಿದೇಶವನ್ನು ನೆಚ್ಚಿಕೊಳ್ಳುತ್ತಿದ್ದ ನೆಹರೂ ಇಲ್ಲೂ ಅದನ್ನೇ ಮಾಡಿದರು. ಯಂತ್ರೋಪಕರಣಗಳು, ಯುದ್ಧ ಸಾಮಾಗ್ರಿಗಳನ್ನೆಲ್ಲ ವಿದೇಶದಿಂದ ಸಾಲ ಮಾಡಿ ತಂದು ಭಾರತವನ್ನು ಪರಾವಲಂಬಿಯನ್ನಾಗಿಸಿದರು. ಅದೇ ಯಂತ್ರೋಪಕರಣಗಳನ್ನು ಇಲ್ಲೇ ಅಭಿವೃದ್ದಿಪಡಿಸಿ ದೇಶೀಯ ವಿಜ್ಞಾನ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದರೆ ಇಂದು ನಮ್ಮ ಬಹುಪಾಲು ವಿದ್ಯಾವಂತ ಭಾರತೀಯರು ಪರದೇಶಗಳಲ್ಲಿ ತಮ್ಮ ಜ್ಞಾನವನ್ನು ವಿನಿಯೋಗಿಸುವ ಅಗತ್ಯ ಇರಲಿಲ್ಲ. ದೇಶದ ಆರ್ಥಿಕ ದರಿದ್ರತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ...

ನೆಹರೂರವರ ಕನಸು ಬೆಳೆಯುತ್ತಿತ್ತು.. ಆದರೆ ಭಾರತವಲ್ಲ... !!!

ಭಾರತದ ನಂತರ ಸ್ವಾತಂತ್ರ ಪಡೆದ ರಾಷ್ಟ್ರಗಳೆಲ್ಲ ವೇಗವಾಗಿ ಅಭಿವೃದ್ದಿ ಹೊಂದಿದವು... ಭಾರತ ಮಾತ್ರ ನೆಹರೂರವರ ಹಗಲುಗನಸುಗಳಲ್ಲೇ ದಿನದೂಡುತ್ತಿತ್ತು.

ದೇಶೀಯ ಮಟ್ಟದಲ್ಲಿ ಜನಪ್ರಿಯತೆ ಸಾಧಿಸಿದ್ದು ಆಯಿತು ಇನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು ಅನ್ನುವುದಷ್ಟೇ ನೆಹರೂ ಗುರಿಯಾಗಿದ್ದಂತೆ ಕಾಣುತಿತ್ತು. ಆದರೆ ಅವರ ಆ ಪ್ರಯತ್ನಗಳೆಲ್ಲ ಮುಂದೆ ನಗೆಪಾಟಲಿಗೆ ಈಡಾಯಿತು. ಅಂತೆಯೇ ಅಪಾಯವನ್ನು ಮೈ ಮೇಲೆ ಎಳೆದುಕೊಂಡಿತ್ತು. ಅವರ ವಿದೇಶಾಂಗ ನೀತಿಯಂತೂ ಅಪ್ಪಟ ಎಳಸು. ಪ್ರಪಂಚದ ಎರಡು ದೊಡ್ಡ ಶಕ್ತಿಗಳಾಗಿದ್ದ ಅಮೇರಿಕ ರಷ್ಯಾ ನಡುವೆ ಶೀತಲ ಸಮರ ನಡೆಯುತ್ತಿದ್ದ ಕಾಲ. ಪ್ರಪಂಚ ಎರಡು ಬಣಗಳಾಗಿ ವಿಭಜನೆ ಹೊಂದಿತ್ತು. ಭಾರತವೂ ತನ್ನ ಭವಿಷ್ಯದ ದೃಷ್ಟಿಯಿಂದ ಒಂದು ಬಣಕ್ಕೆ ಸೇರಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ನಮ್ಮದು 'ಅಲಿಪ್ತ ನೀತಿ' ನಾವು ಅಮೆರಿಕದೊಂದಿಗೆ ಸ್ನೇಹ ಹೊಂದಿದ್ದೇವೆ ಹಾಗು ರಷ್ಯಾದೊಂದಿಗೆ ಸಂಪೂರ್ಣ ಸ್ನೇಹ ಹೊಂದಿದ್ದೇವೆ ಎಂದು ದ್ವಂದ್ವ ಪ್ರದರ್ಶಿಸಿ ಅತ್ತ ಅವರಿಗೂ ಇತ್ತ ಇವರಿಗೂ ಬೇಡವಾದರು. ಇದರ ಸಂಪೂರ್ಣ ಲಾಭವನ್ನು ಪಾಕಿಸ್ತಾನ ಪಡೆದುಕೊಂಡಿತು. ಭಾರತವನ್ನು ಅನುಮಾನದ ದೃಷ್ಟಿಯಿಂದ ನೋಡಿದ ಅಮೇರಿಕ- ರಷ್ಯಾಗಳೆರಡೂ ಪ್ರತ್ಯೇಕವಾಗಿ ಪಾಕಿಸ್ತಾನವನ್ನು ಪೋಷಿಸಿದವು.

ಇನ್ನು ವಿದೇಶಗಳಲ್ಲಿ ಭಾರತದ ರಾಯಭಾರಿಗಳಾಗಿದ್ದವರೆಲ್ಲ ನೆಹರೂ ಕುಟುಂಬಿಕರು, ಗೆಳೆಯರು, ಬಾಲ ಬುಡುಕರುಗಳೇ... ಅವರು ವ್ಯರ್ಥ ಸಮಯ ಕಳೆಯುತ್ತಿದ್ದರೇ ಹೊರತು ಕಾರ್ಯ ಮಾತ್ರ್ತ ಶೂನ್ಯವಾಗಿತ್ತು. ಅದರ ಪರಿಣಾಮ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗುವವರೆಗೆ ಯಾವ ವಿದೇಶಗಳೂ ಭಾರತದ ಹತ್ತಿರ ಬರುತ್ತಿರಲಿಲ್ಲ. ವಾಜಪೇಯೀ ಅವರ ವಿದೇಶಾಂಗ ನೀತಿಗಳ ಕಾರಣದಿಂದಲೇ ಇಂದು ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಬಂಧಗಳನ್ನು ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಬಹುದು. 


ಇಂದಿನ 'ಸೆಕ್ಯುಲರಿಸಂ' (ಭಾರತೀಯ ಅರ್ಥ : ಮುಸ್ಲಿಂ ತುಷ್ಟೀಕರಣ, ಹಿಂದೂಗಳ ಕಡೆಗಣನೆ) ಅನ್ನುವ ರಾಜಕೀಯ ಚಾಳಿಯ ಪಿತಾಮಹ ಇದೆ ಪಂಡಿತ್ ಜೀ.. ಅತ್ತ ಪಾಕಿಸ್ಥಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತ ಹಿಂದೂಗಳ ಮಾರಣ ಹೋಮ ನಡೆಸುತ್ತಿದ್ದರೆ ಇತ್ತ ನೆಹರೂ ತನ್ನ ಆಡಳಿತಾತ್ಮಕ ಯೋಜನೆಗಳ ಮೂಲಕ ಬಹುಸಂಖ್ಯಾತ ಹಿಂದೂಗಳ ಮಾನಸಿಕ ಮಾರಣ ಹೋಮ ನಡೆಸುತ್ತಿದ್ದರು. ಮುಸ್ಲಿಮರು ಒಪ್ಪುವುದಿಲ್ಲ ಎಂದು ವಂದೇ ಮಾತರಂ ರಾಷ್ಟ್ರಗೀತೆಯಾಗುವುದನ್ನು ತಡೆದಿದ್ದು, ಗಲಭೆಗಳ ಸಂದರ್ಭ ಮುಸ್ಲಿಂ ಮತಾಂಧರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಿದ್ದು, ಸರಕಾರದ ಹೆಚ್ಚಿನ ಸವಲತ್ತುಗಳು ಮುಸ್ಲಿಮರಿಗೆ ಹೋಗುವಂತೆ ಆಡಳಿತಾತ್ಮಕ ಮಾರ್ಪಾಡುಗಳನ್ನು ತಂದಿದ್ದು, ಗಾಂಧೀ ಹತ್ಯೆಯ ನೆಪದಲ್ಲಿ ಆರ್.ಎಸ್.ಎಸ್ ಅನ್ನು ನಿಷೇಧಿಸಿದ್ದು, ಹಿಂದೂ ಧರ್ಮದ ವಿವಿಧ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸಿ ಹಿಂದೂಗಳನ್ನು ಒಡೆದದ್ದು, ಅಸ್ಸಾಂ ಅನ್ನು 7 ರಾಜ್ಯಗಳಾಗಿ ವಿಭಜಿಸಿ ಅಲ್ಲಿ ಕ್ರಿಶ್ಚಿಯನ್ ಮಿಶನರಿಗಳಿಗೆ ಮುಕ್ತ ಅವಕಾಶ ಕಲ್ಪಿಸಿ ನಾಗಾಲ್ಯಾಂಡ್ ನಂತಹ ಪೂರ್ಣ ಹಿಂದೂ ರಾಜ್ಯಗಳನ್ನು ಕ್ರಿಶ್ಚಿಯನೀಕರಿಸಲು ಒತ್ತಾಸೆಯಾಗಿದ್ದು, ಕ್ರಿಶ್ಚಿಯನ್ ಸಂಸ್ಥೆಗಳಿಗೆ ನೀಡಿದ್ದ ಸರ್ವಾಧಿಕಾರವನ್ನು ಕೇರಳದಲ್ಲಿ ಆಗ ತಾನೇ ಬಂದಿದ್ದ ಕಮ್ಯುನಿಷ್ಟ್ ಸರಕಾರ ಹಿಂಪಡೆದದ್ದಕ್ಕೆ ಮುಂದೆ ಕೇರಳ ಸರಕಾರವನ್ನೇ ವಜಾಗೊಳಿಸಿದ್ದು ಎಲ್ಲವೂ ನೆಹರೂ ಹಿಂದೂ ವಿರೋಧಿ ರಾಜಕಾರಣದ ಫಲವೇ...

ಇಂದು ನಮ್ಮ ರಾಷ್ಟ್ರದ ಭ್ರಷ್ಟಾಚಾರವನ್ನು ನೋಡಿದಾಗ ನಮಗೇ ದಿಗ್ಭ್ರಮೆಯಾಗುತ್ತದೆ. ಆದರೆ ಇದರ ಮೂಲವನ್ನು ಹುಡುಕುತ್ತಾ ಹೋದಾಗ ಕೊನೆಗೆ ಬರುವುದು ನೆಹರೂ ಕಡೆಗೇನೆ. ಅಂತಹ ದೊಡ್ಡ ಭ್ರಷ್ಟಾಚಾರದ ಮೂಟೆಯಾಗಿತ್ತು ನೆಹರೂ ಸರಕಾರ. ದೇಶಕ್ಕಾಗಿ ಕೆಲಸ ಮಾಡುವಾಗ ದೇಶದಿಂದ ಸ್ವಲ್ಪ ಪಡೆದುಕೊಂಡರೆ ತಪ್ಪೇನು ಎನ್ನುತ್ತಿದ್ದರು ನೆಹರೂ... ಎಲ್ಲಿಯ ಗಾಂಧೀ, ಎಲ್ಲಿಯ ನೆಹರೂ... !! ತನ್ನ ಸರಕಾರದ ಭ್ರಷ್ಟಾಚಾರದ ಬಗ್ಗೆ ಯಾರಾದರೂ ಕೇಳಿದರೆ ನೆಹರೂ ಉರಿದು ಬೀಳುತ್ತಿದರು. ಜನಪ್ರತಿನಿಧಿಗಳಾಗಿ ರಾಷ್ಟ್ರದ ಸಂಪತ್ತು ನಮಗೆ ಸೇರಿದ್ದು ಎಂಬತ್ತಿತ್ತು ಅವರ ಕಾರ್ಯದ ವೈಖರಿ...
ನೆಹರೂ ಕಾಲದ ಭ್ರಷ್ಟಾಚಾರಗಳ ಕೆಲ ಸ್ಯಾಂಪಲ್ ಈ ರೀತಿ ಇದೆ.

1) 2000 ಯುದ್ಧ ಜೀಪುಗಳನ್ನು ವಿದೇಶದಿಂದ ತರಿಸಿಕೊಳ್ಳಲಾಗಿತ್ತು. ಆದರೆ ಬಂದಿದ್ದು 155 ಜೀಪು ಮಾತ್ರ. ಅದೂ ಕೂಡ ಅಯೋಗ್ಯವೆಂದು ಸೇನೆ ತಿರಸ್ಕರಿಸಿತು. 80 ಲಕ್ಷ ರೂಪಾಯಿ ಗುಳುಂ ಆಗಿತ್ತು.
2) 48 ಕೋಟಿ  ರೂ. ಗಳ ಸೆಣಬು ಹಗರಣ. 
3) ದಾಮೋದರ  ಕಣಿವೆ ಯೋಜನೆಯಲ್ಲಿ ಎರಡು ವರ್ಷಗಳ ಕಾಲ ಒಬ್ಬನೇ ಒಬ್ಬ ಇಂಜಿನಿಯರ್ ಇಲ್ಲದೆಯೂ 739 ಲಕ್ಷ ಖರ್ಚಾಗಿತ್ತು.
4) ಸಿಂದ್ರಿ  ರಾಸಾಯನಿಕ ಗೊಬ್ಬರ ಕಾರ್ಖಾನೆ ನಿರ್ಮಾಣದಲ್ಲಿ 10 ಕೋಟಿ ರೂಪಾಯಿ ಹಗರಣ. 
5) 17 ಕೋಟಿ ರೂ. ಗಳ ಆಮದು ರಸಗೊಬ್ಬರ ಹಗರಣ.
6) 22 ಕೋಟಿ ರೂ. ಗಳ ಟ್ರಾಕ್ಟರ್ ಹಗರಣ. 
7) ಬ್ರಿಟೀಷರು ಭಾರತ ಬಿಟ್ಟಾಗ ನಮ್ಮ ರೈಲ್ವೇ ಇಲಾಖೆ 42 ಲಕ್ಷಕ್ಕೂ ಅಧಿಕ ಲಾಭದಲ್ಲಿತ್ತು. ಸ್ವಾತಂತ್ರಾ ನಂತರದ 2 ವರ್ಷದಲ್ಲಿ ರೈಲ್ವೆ ಇಲಾಖೆ 83 ಲಕ್ಷ ನಷ್ಟ ಮಾಡಿಕೊಂಡಿತ್ತು. ಇಂದು ಅದು ಕೋಟಿಗಳನ್ನೂ ಮೀರಿದೆ. 
8) ಮಧ್ಯ ನಿಷೇಧಕ್ಕೆ 140 ಕೋಟಿ ಬಳಸಲಾಯ್ತು. ಮಧ್ಯ ಅಂತೂ ನಿಷೇಧವಾಗಲಿಲ್ಲ. ಬದಲಾಗಿ ಕಳ್ಳಭಟ್ಟಿ ಧಂಧೆ ದುಪ್ಪಟ್ಟಾಯಿತು.
9) 14 ಕೋಟಿ ರೂ ಗಳ ಬೋಕೊರೋ ಉಷ್ಣ ವಿದ್ಯುತ್ ಸ್ಥಾವರ ಹಗರಣ.

ಅಂದಿನ ಒಂದು ಕೋಟಿ ಅಂದರೆ ಇಂದಿನ ನೂರು ಕೋಟಿಗೆ ಸಮ. ಆ ದೃಷ್ಟಿಯಲ್ಲಿ  ನೋಡಿದಾಗ ಅಂದಿನ ಹಗರಣಗಳ ತೀವ್ರತೆ ಅರಿವಾಗುತ್ತದೆ. ಆದರೆ ಅದ್ಯಾವುದೂ ಸುದ್ದಿಯಾಗದಂತೆ ನೋಡಿಕೊಂಡರು ನೆಹರೂ. ಅದೇ ನೆಹರೂ ಹಾಕಿದ ಭ್ರಷ್ಟಾಚಾರದ ಮರ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಇಷ್ಟೊಂದು ಭ್ರಷ್ಟಾಚಾರ ಇರುವಾಗ ನೆಹರೂರವರ ಯೋಜನೆಗಳೆಲ್ಲ ಯಶಸ್ವಿಯಾಗುವುದು ಹೇಗೆ ಸಾಧ್ಯ... ಅವರ ಸರ್ಕಾರದ ಪಂಚ ವಾರ್ಷಿಕ ಯೋಜನೆಗಳ ವೈಫಲ್ಯವೇ  ಇದಕ್ಕೆ ಸಾಕ್ಷಿ... ನಾಗಪುರ ವಿವಿಯ ಡಾ. ಬಿ.ಎನ್. ವೈದ್ಯ ಅವರ ದಾಖಲೆಗಳ ಪ್ರಕಾರ ನೆಹರೂ ಅವಧಿಯಲ್ಲಿ ಕೈಗೆತ್ತಿಕೊಂಡ ಪ್ರತಿ ಪಂಚ ವಾರ್ಷಿಕ ಯೋಜನೆಯು ಬಡತನ  ರೇಖೆಯ ಕೆಳಗಿರುವ ಜನರ ಪ್ರಮಾಣವನ್ನು ಏರಿಸುತ್ತಲೇ ಬಂದಿದೆ. 1951 ರಲ್ಲಿ ಮೊದಲ ಪಂಚ ವಾರ್ಷಿಕ ಯೋಜನೆ ಜಾರಿಗೆ ಬರುವಾಗ ಹಳ್ಳಿಗಳಲ್ಲಿ ಶೇಕಡಾ 47.37 , ಪಟ್ಟಣಗಳಲ್ಲಿ ಶೇಕಡಾ 35.46 ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದರು. ಆದರೆ ಯೋಜನೆ ಮುಗಿಯುವ ವೇಳೆಗೆ ಆ ಸಂಖ್ಯೆ ಹಳ್ಳಿಗಳಲ್ಲಿ ಶೇಕಡಾ 64.24, ಪಟ್ಟಣಗಳಲ್ಲಿ 46.19 ಮುಟ್ಟಿತ್ತು. ಎರಡನೆಯ ಪಂಚವಾರ್ಷಿಕ ಯೋಜನೆಯ ಕೊನೆಗೆ ಹಳ್ಳಿಗಳಲ್ಲಿ 62.11 ಶೇಕಡಾ , ಪಟ್ಟಣಗಳಲ್ಲಿ 48.88 ಶೇಕಡಾ ಬಡತನ ರೇಖೆಗಿಂತ ಕೆಳಗಿದ್ದರು. ... !!!
ವಿಜ್ಞಾನದ ಹರಿಕಾರ, ಅಭಿವೃದ್ದಿಯ ಸೂತ್ರಧಾರ ಎಂದೆಲ್ಲ ತನ್ನ ಹೊಗಳುಭಟರಿಂದ ಕರೆಸಿಕೊಳ್ಳುತ್ತಿದ್ದ ನೆಹರೂ ಯೋಜನೆಗಳ ಯಶಸ್ಸು ಇದೇ... !

ಕಾಶ್ಮೀರವನ್ನು ಪ್ರಶ್ನೆಯಾಗಿಯೇ ಉಳಿಸಿಟ್ಟು ಹೋದ ನೆಹರೂ...

ಸಣ್ಣ ಸಣ್ಣ ಸಂಸ್ಥಾನಗಳಾಗಿ ತುಂಡಾಗಿದ್ದ ಭಾರತವನ್ನು ಜೋಡಿಸುವ ಕಾರ್ಯ ಪಟೇಲರದಾಗಿತ್ತು. ಅವೆಲ್ಲವನ್ನೂ ಅಲ್ಪ ಸಮಯದಲ್ಲೇ ಅಚ್ಚು ಕಟ್ಟಾಗಿ ಮಾಡಿ ಮುಗಿಸಿದ್ದರು ಪಟೇಲರು. ಆದರೆ ಕಾಶ್ಮೀರವನ್ನು ಮಾತ್ರ ನಾನೇ ಬಗೆಹರಿಸಿಕೊಳ್ಳುತ್ತೇನೆ ಎಂದ ನೆಹರೂ  ಇಂದಿಗೂ ಅದನ್ನು ಪ್ರಶ್ನೆಯಾಗಿಯೇ ಉಳಿಸಿಟ್ಟು ಹೋಗಿದ್ದಾರೆ. ಕಾಶ್ಮೀರದ ಹಿಂದೂ ರಾಜನಿಗೆ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸಲು ಮಹಾದಾಸೆ ಇದ್ದರೂ ನೆಹರೂರವರು ತಮ್ಮೊಂದಿಗೆ ತೋರಿಸುತ್ತಿದ್ದ ದರ್ಪಕ್ಕೆ ಅಸಮಧಾನಗೊಂಡು ಪಾಕಿಸ್ತಾನದೊಂದಿಗೆ ಹೋಗುವ ದ್ವಂದ್ವದಲ್ಲಿದ್ದರು. ಕಡೆಗೆ ಪಟೇಲರು ಮಧ್ಯ ಪ್ರವೇಶಿಸದಿದ್ದರೆ ಕಾಶ್ಮೀರ ಪಾಕಿಸ್ತಾನದ ಮಡಿಲಿಗೆ ಸೇರುತ್ತಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಭಾರತದ ಮೇಲೆ ಧಾಳಿಯಿಟ್ಟಿತು. ಕಾಶ್ಮೀರದಾದ್ಯಂತ ಪಾಕ್ ಸೈನಿಕರು ಹಿಂದೂ ಮುಸಲ್ಮಾನ ಭೇಧವೆನಿಸದೆ ಮಾತಾ ಭಗಿನಿಯರ ಮಾನ ಸೂರೆಗೈದರು, ಕೊಲೆ ಲೂಟಿಗಳಾದವು. ಆತಂಕಗೊಂಡ ನೆಹರೂ ಆಕಾಶವಾಣಿಯ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಆಡಿದ ಮಾತುಗಳು ಒಂದು ರೋದನದಂತಿತ್ತು. ಆದರೆ ಪಟೇಲರು ಸುಮ್ಮನೆ ಕುಳಿತಿರಲಿಲ್ಲ.!


ಯುದ್ಧ ಕಾರ್ಯಕ್ಕಿಳಿದರು.. ಇತ್ತ ಪಟೇಲರು ಧಾಳಿಯ ನಾಯಕತ್ವ ವಹಿಸಿಕೊಳ್ಳುತ್ತಿದ್ದಂತೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿತು. ನಮ್ಮ ಭಾರತೀಯ ಸೈನಿಕರು ವಿಜಯದ ಪತಾಕೆ ಹಾರಿಸುತ್ತ ಮುನ್ನಡೆಯುತ್ತಿದ್ದರು... ಆಗಲೇ ನೆಹರೂ ಮಹಾ ಮೂರ್ಖತನದ ಕೆಲಸ ಮಾಡಿದ್ದು. ನಮ್ಮ ಸೈನಿಕರು ಪೂರ್ಣ ವಿಜಯದ ಬಾಗಿಲಲ್ಲಿ ಇರುವಾಗ ವಿಶ್ವ ಸಂಸ್ಥೆಯ ಬಾಗಿಲು ಬಡಿದ ನೆಹರೂ ಮಧ್ಯಸ್ಥಿಕೆಗೆ ಕೋರಿದರು.  ಪಟೇಲರಿಗೆ ಈ ವಿಷಯ ಗೊತ್ತೇ ಇರಲಿಲ್ಲ.. ಅದರ ಪರಿಣಾಮ ಪಾಕ್ ಆಕ್ರಮಿತ ಕಾಶ್ಮೀರ ಎಂಬ ಸ್ವಲ್ಪ ಭೂಮಿ ಪಾಕ್ ವಶದಲ್ಲೇ ಉಳಿಯಿತು.


ನೆಹರೂ ಸತ್ತಿರಬಹುದು. ಆದರೆ ದಿನಾ ಸಾಯುವ ಕಾಶ್ಮೀರಿಗಳ ಪಾಡು ಕೇಳಲು ಯಾರು ಇಲ್ಲ. ದಿನಾ ನಮ್ಮ ಹೃದಯ ಚುಚ್ಚುವ ಕಾಶ್ಮೀರ ಸಮಸ್ಯೆಗೆ ಪರಿಹಾರ ಒದಗಿಸುವವರಿಲ್ಲ. ಅಂದಿನ ನೆಹರೂ ಮೂರ್ಖತನ ನಮ್ಮನ್ನು ಪ್ರತಿ ಕ್ಷಣ ಸಾಯಿಸುತ್ತಿದೆ. ಹೃದಯದ ಬೇಗುದಿ ಉರಿಯುತ್ತಲೇ ಇದೆ... 

ಮುಂದೆ ಚೀನಾ ಯುದ್ಧದಲ್ಲೂ ನೆಹರೂ ವೈಫಲ್ಯದಿಂದಾಗಿ ನಮ್ಮ ಭಾರತೀಯ ಸೈನಿಕರು ಬೆಂಕಿಗೆ ಬೀಳುವ ಕೀಟಗಳಂತೆ ನೆಲಕ್ಕುರುಳಿದರು. ನೆಹರೂರವರ ಅಲಿಪ್ತ ನೀತಿ ಸೈನ್ಯವನ್ನು ನಿಷ್ಕ್ರಿಯಗೊಳಿಸಿತ್ತು. ಒಂದು ಬೂಟು, ಕೈಗವಚ, ಮುಖದ ಮಾಸ್ಕ್ ಇದ್ಯಾವುದೂ ಇಲ್ಲದ ಪರಿಸ್ಥಿತಿಯಲ್ಲಿ ನಮ್ಮ ಸೈನಿಕ ಹಳೆಯ ಕಾಲದ ಬಂದೂಕು ಹಿಡಿದುಕೊಂಡು ಚೀನಾದೊಂದಿಗೆ ಕಾದಾಡುತ್ತಿದ್ದ... !! ವಿಶ್ವದ ಮುಂದೆ ಭಾರತದ ಸೈನ್ಯ ಶಕ್ತಿಯ ಪ್ರದರ್ಶನವಾಗಿ ಹೋಗಿತ್ತು. ಕೊನೆಯ ಕ್ಷಣದಲ್ಲಿ ಅಮೇರಿಕ ನಮ್ಮ ಸಹಾಯಕ್ಕೆ ಧಾವಿಸದಿದ್ದರೆ ಭಾರತ ಚೀನೀಯರ ವಶವಾಗುತಿತ್ತು.  ಅಂದಿನ ಆ ಮಹಾ ಅವಮಾನಕ್ಕೆ ನೆಹರೂ ಮತ್ತು ಅವರ ಬಾಲಬುಡುಕರೇ ನೇರ ಹೊಣೆ. ಅಂದಿನ ಯುದ್ಧದಲ್ಲಿ ಭಾಗವಹಿಸಿದ್ದ ಬ್ರಿಗೇಡಿಯರ್ ಜಾನ್. ಪಿ. ದಳವಿ ಬರೆದ ಹಿಮಾಲಯನ್ ಬ್ಲಂಡರ್ ಭಾರತ ಚೀನಾ ಯುದ್ಧದ, ನಂತರದ ಪರಿಸ್ಥಿತಿಯ, ಇಂತಹ ಹೀನಾಯ ಸ್ಥಿತಿಗೆ ಕಾರಣವಾದ ನೆಹರೂ ಮತ್ತವರ ಬಾಲ ಬುಡುಕರು ನಡೆದುಕೊಂಡ ರೀತಿಯ ಪ್ರತಿ ಎಳೆ ಎಳೆಯನ್ನು ಬಿಚ್ಚಿಡುತ್ತದೆ. ಆ ಪುಸ್ತಕ ಓದಿ ಮುಗಿಸಿದ ಮೇಲೆ ನಿಮ್ಮ ಕಣ್ಣುಗಳಲ್ಲಿ ಒಂದು ಹನಿ ಕಣ್ಣೀರು ಬರದಿದ್ದರೆ ಹೇಳಿ.

ಆದರೆ ಇದ್ಯಾವುದನ್ನೂ ನಾನು ಶಾಲಾ ಪಾಠ ಪುಸ್ತಕದಲ್ಲಿ ಓದಿಲ್ಲ. ಯಾವ ಟೀಚರ್ ಕೂಡ ಈ ಬಗ್ಗೆ ಹೇಳಿರಲಿಲ್ಲ. ನೆಹರೂ ವಂಶಸ್ಥರ ಗುಣಗಾನ ಮಾಡುವ ಶಿಕ್ಷಣವನ್ನೇ ನಾವು ಪಡೆಯುತ್ತಿರುವಾಗ ಈ ತೆರೆಯ ಹಿಂದಿನ ಸತ್ಯಗಳು ಹೇಗೆ ತಾನೇ ಬೆಳಕು ಕಾಣಲು ಸಾಧ್ಯ. !! ? ಅಂದು ನಾನೇ ಶಾಲೆಯಲ್ಲಿ ಭಾಷಣ ಮಾಡುವಾಗ ನೆಹರೂರವರನ್ನು 'ಚಾಚಾ..' ಎನ್ನುತ್ತಿದ್ದೆ.. ಆದರೆ ಈಗಂತೂ ಸಾಧ್ಯವಿಲ್ಲ. ನನ್ನ ದೇಶವನ್ನು , ನನ್ನ ಜನರನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿ ಸಮಸ್ಯೆಗಳ ಆಗರ ಸೃಷ್ಟಿಸಿ ನಮ್ಮನ್ನೆಲ್ಲ ಪ್ರತಿದಿನ ಸಾಯಿಸುತ್ತಿರುವ ಆ ನೆಹರೂ ಹೇಗೆ ತಾನೇ 'ಚಾಚಾ'ನಾಗುತ್ತಾರೆ...
ಮನಸ್ಸು "ಛೀ ಛೀ ..." ಅನ್ನುತ್ತಿದೆ ... ಕಣ್ಣಂಚಲ್ಲಿ ಒಂದು ಹನಿ ಬೀಳಲೋ ಬೇಡವೋ ಎನ್ನುವಷ್ಟರ ಮಟ್ಟಿಗೆ ಕಣ್ಣು ಭಾರವಾಗಿದೆ.. 




Friday, November 8, 2013

ಮೊದಮೊದಲು...


ಮೊಗ್ಗು ಹೂವಾದಾಗ
ಮಗುವು ಅಂಬೆಗಾಲಿಡುವಾಗ
ಕಾಯಿ ಹಣ್ಣಾಗೋ ಆ ಸುಂದರ ಯಾತನೇ
ಮೊದಲ ಸ್ಪರ್ಶದ ಮನದ ಹರ್ಷದ... 
ಆಹಾ ಏನಿದು ಭಾವನೇ
ಕಾರಣ ನೀನೇನೆ...

ಹಸುವು ಹಾಲುಣಿಸೋವಾಗ
ಹಕ್ಕಿ ರೆಕ್ಕೆ ಬಡಿದಾಗ
ವರುಣ ಭುವಿಯ ಸೋಕಿದಾಗ
ಆಹಾ ವರ್ಣಿಸಲಾಗದೇ
ಮಾತು ಕಟ್ಟಿ...ಮೌನ ಬೆಳೆದು
ಹೃದಯ ತೇಲಾಡಿದೇ...

ಅಯೋಮಯವು ಈ ಮನ
ಕಣ್ತುಂಬ ನಿನ್ನದೇ ಸರೀಗಮ
ಕಣ್ಣಾ ಮುಚ್ಚಾಲೆ ಆಡಿದೆ ಹೃದಯ
ನಿನ್ನ ಮೊದಲ ನೋಟಕೆ ಹೆದರಿ.. 
ಈ ಮೊದಲ ತೊದಲ ಪ್ರೀತಿಗೆ
ಕೊಡುವೆಯಾ ಹೃದಯದ ಕಾಣಿಕೆ