Monday, June 17, 2013

ಭಾರತೀಯರಿಗೆಲ್ಲ ನಮೋನಿಯ ಬಂದ ಮೇಲೆ (ಎನ್.ಡಿ.ಎ ಬಿರುಕಿನ ಅವಲೋಕನ)


ಅತ್ತ ನರೇಂದ್ರ ಮೋದಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಘೋಷಣೆ ಯಾಗುತ್ತಿದ್ದಂತೆ NDA ಯಲ್ಲಿ ಮೊದಲ ಹಾಗು ನಿರೀಕ್ಷಿತ ಬಿರುಕು ಕಾಣಿಸಿಕೊಂಡಿದೆ. NDA ಪಾಳಯದ ಎರಡನೇ ಅತೀ ದೊಡ್ಡ ಪಕ್ಷವಾಗಿದ್ದ JDU ಎನ್ ಡಿ ಎ ಜತೆಗಿನ ತನ್ನ 17 ವರ್ಷಗಳ ಸಂಬಂಧ ಕಳಚಿ ಈಗ ಮೂರನೇ ರಂಗದತ್ತ ಚಿತ್ತ ನೆಟ್ಟಿದೆ. ಇದೊಂಥರಾ ಒಂದನೇ ಕ್ಲಾಸಿನ ಹುಡುಗ SSLC ಬರೆಯುವ ಕನಸು ಕಂಡಂತೆ...

ಇದೊಂದು ನಿರೀಕ್ಷಿತ ಬೆಳವಣಿಗೆ...
ಅದೇ ಕಾರಣಕ್ಕಾಗಿ JDU BJP ವಿಚ್ಚೇದನದ ಬಗ್ಗೆ ಯಾವುದೇ ರೀತಿಯ ಆಶ್ಚರ್ಯವಾಗುವುದಿಲ್ಲ. ಯುಪಿಎ ಭ್ರಷ್ಟಾಚಾರದ ಬಗೆಗಿನ ಜೆಡಿಯು ಮೌನ ಹಾಗು ಇದೇ ವರ್ಷದ ಎಪ್ರಿಲ್ ನಲ್ಲಿ ಕೇಂದ್ರದ UPA ಸರಕಾರ ಬಿಹಾರಕ್ಕಾಗಿ 12,000 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿದಾಗಲೇ ಇದರ ವಾಸನೆ ಬಡಿದಿತ್ತು. ಇಲ್ಲಿ JDU ನ ಈ ನಡೆಯ ಹಿಂದೆ ಮೂರು  ಪ್ರಮುಖ ತೆರೆ ಮರೆ ಕಾರಣಗಳಿವೆ
೧) ಕೇಂದ್ರದಿಂದ ಇನ್ನಷ್ಟು ಅನುದಾನ ಗಿಟ್ಟಿಸಿಕೊಳ್ಳುವುದು.
೨) ಬಿಹಾರದಲ್ಲಿನ 16.5 % ಮುಸ್ಲಿಂ ವೋಟು ಬ್ಯಾಂಕ್ ಓಲೈಕೆ.
೩) ಮೂರನೇ ರಂಗದ ನಾಯಕತ್ವ ವಹಿಸಿ ಮುಂದಿನ ಸರಕಾರದಲ್ಲಿ ಪ್ರಧಾನ ಪಾತ್ರ ವಹಿಸುವುದು.
ಇವೆಲ್ಲ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನುವುದಕ್ಕೆ ಮಾತ್ರ ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶದವರೆಗೆ ಕಾಯಬೇಕು. ಪ್ರಸುತ ನೋಡಿದಾಗ ಇವೆಲ್ಲ ತಲೆಕೆಳಕಾಗೋ ಸಾಧ್ಯತೆಗಳೇ ಹೆಚ್ಚು...

ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಬಿಜೆಪಿ ಜತೆಗಿದ್ದು ಬಿಜೆಪಿ ಪ್ರಭಾವವನ್ನು ಬಳಸಿಕೊಂಡ ಜೆಡಿಯು ಈಗ ನಡೆಸುತ್ತಿರುವುದು ಪಕ್ಕಾ ಸ್ವಾರ್ಥ ರಾಜಕಾರಣ. ಇಲ್ಲಿ ಜೆಡಿಯುನ ಇತರ ನಾಯಕರಿಗಿಂತಲೂ ನಿತೀಶ್ ಕುಮಾರ್ ಅವರ ವಯಕ್ತಿಕ ಸ್ವಾರ್ಥ ಮತ್ತು   ಅಹಂ ಎದ್ದು ಕಾಣುತ್ತದೆ. ಬಿಹಾರದಾದ್ಯಂತ ಮೋದಿ ಬ್ಯಾನರ್ ಕಂಡು ಬಿಜೆಪಿ ಕಾರ್ಯಕಾರಿಣಿ ಮಂಡಳಿಗೆ ಏರ್ಪಡಿಸಿದ್ದ ಔತಣಕೂಟವನ್ನು ರದ್ದುಪಡಿಸಿದ  ಹಾಗು ಗುಜರಾತ್ ನಲ್ಲಿ 2008 ರಲ್ಲಿ ಉಂಟಾದ ಕೋಸಿ ಪ್ರವಾಹ ಪೀಡಿತರ ಪರಿಹಾರ ಕಾರ್ಯಕ್ಕಾಗಿ 5 ಕೋಟಿ ನೀಡಿ ನಂತರ ವಾಪಾಸ್ಸು ಪಡೆದ ವ್ಯಕ್ತಿಯಿಂದ ಇನ್ನು ಏನು ತಾನೇ ನಿರೀಕ್ಷಿಸಬಹುದು ?!

ಪ್ರಸ್ತುತ ಲೋಕಸಭೆಯಲ್ಲಿ ಬಿಜೆಪಿ 116 ಸೀಟು ಹೊಂದಿದೆ. ಜೆಡಿಯು 20... ಬಿಹಾರದ ಜನತೆ ಎನ್ ಡಿ ಎ ಗೆ ನೀಡಿದ ಜನಾದೇಶವನ್ನು ತಿರಸ್ಕರಿಸಿರುವ ನಿತೀಶ್ ನೇತೃತ್ವದ ಜೆಡಿಯು ಮುಂದಿನ ಲೋಕಸಭಾ ಚುನಾವಣೆ ಯಲ್ಲಿ 10-15 ಸ್ಥಾನ ಪಡೆದರೆ ಅದೇ ಹೆಚ್ಚು.. ಜೆಡಿಯು ನ ಈ ನಡೆಯಿಂದ ಲಾಭವಾಗುವುದು ಬಿಜೆಪಿ ಹಾಗು RJD ಗೆ... ಬಹುಶಃ RJD ಅಲ್ಲಿ ಅತೀ ಹೆಚ್ಚು ಸ್ಥಾನ ಗಳಿಸಿಕೊಂಡರೂ ಆಶ್ಚರ್ಯವಿಲ್ಲ. ಆದರೆ ಇದು RJD ಕಾಂಗ್ರೆಸ್ಸ್ ಹಾಗು ಪಾಸ್ವಾನ್ ಅವರ ಮೈತ್ರಿಯ ಮೇಲೆ ನಿರ್ಧಾರವಾಗುತ್ತದೆ. ಇನ್ನೊಂದು ಕೋನದ ಪ್ರಕಾರ ಮುಸ್ಲಿಂ ವೋಟು ಬ್ಯಾಂಕ್ ಅನ್ನೇ ಈ ಬಾರಿ  ಹೆಚ್ಚಾಗಿ ನಂಬಿಕೊಂಡಿರುವ ಜೆಡಿಯುನಿಂದಾಗಿ ಮುಸ್ಲಿಂ ವೋಟು ಬ್ಯಾಂಕ್ ವಿಭಜನೆಯಾಗಿ ಬಿಜೆಪಿ ಗೆ ಲಾಭವಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು . ಜತೆಗೆ ಬಿಹಾರದ ಪ್ರಧಾನ ಪ್ರತಿ ಪಕ್ಷ ಸ್ಥಾನ ಬಿಜೆಪಿ ಗೆ ಸಿಗುತ್ತಿರುವುದು ಇದಕ್ಕೊಂದು ಪ್ಲಸ್ ಪಾಯಿಂಟ್. ಈ ಒಟ್ಟಾರೆ ಬೆಳವಣಿಗೆ ಬಿಜೆಪಿ ಗೆ ಲಾಭದಾಯಕವೇ ವಿನಃ ಯಾವುದೇ ರೀತಿಯಲ್ಲಿ ಮಾರಕವಾಗುವುದಿಲ್ಲ.

ಇನ್ನು ಮೂರನೇ ರಂಗ... ಇದನ್ನು ಎಷ್ಟೋ ವರ್ಷಗಳಿಂದ ಕೇಳ್ತಾ ಇದೀವಿ. ಇದರಲ್ಲಿ ಇದ್ದ ಪಕ್ಷ ಮಾರನೇ ದಿನ ಅದೇ ರಂಗದಲ್ಲಿ ಇರುತ್ತದೆ ಅನ್ನುವ ನಂಬಿಕೆಯಂತೂ ಇಲ್ಲ. ಇದೊಂದು ಜಿಗಿತದ ರಂಗ ಇದ್ದ ಹಾಗೆ.. ಈ ಮೊದಲು ಕಾಂಗ್ರೆಸ್ಸ್ ಗೆ ಪರ್ಯಾಯ ಶಕ್ತಿಯನ್ನು ರೂಪಿಸಬೇಕೆಂದು NDA ಕಟ್ಟಲಾಯಿತು. ಇದರಲ್ಲಿ NDA ಯಶಸ್ವಿಯೂ ಆಯ್ತು. ಆದರೆ NDA ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಗೆ ಪರ್ಯಾಯ ಶಕ್ತಿ ಬೆಳೆಸುವ ಬಗ್ಗೆ ಚಿಂತನೆಗಳು ಆರಂಭವಾದವು. ಆದರೆ ಇಂದಿನವರೆಗೂ ಆ ಪ್ರಯತ್ನ ಮಾತ್ರ ಯಶಸ್ವಿಯಾಗಿಲ್ಲ. ತೃತೀಯ ರಂಗದ ಸತತ ವಿಫಲತೆಗೆ ಪ್ರಮುಖ ಕಾರಣ ಸ್ಥಿರ ನಾಯಕತ್ವದ ಕೊರತೆ. ಯುಪಿಎ ಗೆ ಸೋನಿಯಾ, NDA ಗೆ ಹಿಂದೆ ಅಟಲ್ ಈಗ ಆಡ್ವಾಣಿ ಹೀಗೆ ಒಂದು ಸ್ಥಿರ ನಾಯಕತ್ವವಿದೆ. ಆದರೆ ಮೂರನೇ ರಂಗಕ್ಕೇ ??! ಇವತ್ತು ಒಂದು ಹೆಸರು ಹೇಳಿದರೆ ನಾಳೆ ಅದೇ ಹೆಸರು ಉಳಿದಿರುತ್ತದೆ ಅನ್ನುವ ನಂಬಿಕೆಯಿಲ್ಲದ ಕಾರಣ ನಾನು ಆ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾವುದೇ ಒಂದು ಪ್ರಬಲ ರಾಷ್ಟ್ರೀಯ ಪಕ್ಷದ ಬೆಂಬಲ ಇಲ್ಲದೆ ರಾಜಕೀಯ ರಂಗವನ್ನು ಬೆಳೆಸುವುದು ಖಂಡಿತ ಅಸಾಧ್ಯ. ಹಾಗಾಗಿ ಬರೀ ಪ್ರಾದೇಶಿಕ ಮಟ್ಟದ ಪಕ್ಷಗಳಿಂದ ಕೂಡಿದ ಮೂರನೇ ರಂಗ ಯಶಸ್ವಿಯಾಗುವುದಂತೂ ದೂರದ ಮಾತು.. !! ಮೊನ್ನೆ ಮೊನ್ನೆ ಮೂರನೇ ರಂಗದ ಮಾತುಕತೆ ನಡೆದು ಕೆಲ ದಿನಗಳಾಗುವಷ್ಟರಲ್ಲಿ ಮೂರನೇ ರಂಗದ ಸಂಭಾವ್ಯ ಪಕ್ಷವೆಂದು ಗುರ್ತಿಸಲ್ಪಟ್ಟಿರುವ ತೃಣಮೂಲ ಕಾಂಗ್ರೆಸ್ಸ್ ಮುನಿಸಿಕೊಂಡಿರುವುದು ಇದಕ್ಕೆ ಸಾಕ್ಷಿ. ಇನ್ನು ಮುಂದಿನ ದಿನಗಳಲ್ಲಿ ಹೇಗೆ ಅನ್ನುವ ಬಗ್ಗೆ ಇದೇ ಸುಳಿವು ನೀಡುತ್ತದೆ.

ಇಷ್ಟರವರೆಗೆ ಮೋದಿ NDA ಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಇದ್ದ ಅಡ್ಡಿಯಂತೂ ಈಗ ನಿವಾರಣೆಯಾಗಿದೆ. ಮುಂಬರುವ ದಿನಗಳಲ್ಲಿ ನಮೋ ಮಿತ್ರರು NDA ಸೇರಿಕೊಳ್ಳುವ ಅವಕಾಶಗಳೂ ದಟ್ಟವಾಗಿದೆ. ತಮಿಳುನಾಡಿನ ಜಯಲಲಿತಾ   ಇದರಲ್ಲಿ ಪ್ರಮುಖರು. ಹಾಗೆಯೇ ಮೋದಿ ನಾಯಕತ್ವದಿಂದ ಕರ್ನಾಟಕದಲ್ಲಿ ಯಡಿಯೂರಪ್ಪರ ಬಿಜೆಪಿ ಮರು ಸೇರ್ಪಡೆಗೆ ದಾರಿ ಸುಗಮವಾದಂತಾಗಿದೆ. ಒಟ್ಟಾರೆ ಬೆಳವಣಿಗೆಗಳ ಅವಲೋಕನದಿಂದ ಒಂದಂತೂ ದೃಢವಾಗುತ್ತದೆ. ಅದೇನೆಂದರೆ, ಬಿಜೆಪಿ ಇದರಿಂದ ಕಳೆದುಕೊಳ್ಳುವುದಕ್ಕಿಂತ ಗಳಿಸಿಕೊಳ್ಳುವುದೇ ಹೆಚ್ಚಿದೆ...

ಕೊನೇ ಮಾತು : ಭಾರತೀಯರಿಗೆಲ್ಲ ನಮೋನಿಯ ಬಂದ ಮೇಲೆ ನಿತೀಶ್ ಏನು, ಯಾರಿಂದಲೂ ಗುಣಪಡಿಸಲಾಗದು...!





2 comments:

  1. ಚಿಂತೆ ಬೇಡ..!!
    JDU ನಿರ್ಗಮನದಿಂದ ಆದ ನಷ್ಟಕ್ಕೆ ಒಂದಕ್ಕೆ ನಾಲ್ಕು ಪಟ್ಟು ಮೋದಿಜೀ ತುಂಬಿಕೊಡಲಿದ್ದಾರೆ

    ReplyDelete
  2. ಹಿಂದೆ ಜಾರ್ಜ್ ಫೆರ್ನಾಂಡಿಸ್ ರ ಸಮತಾ ಪಕ್ಷವನ್ನು ತನ್ನ ಜೆಡಿಯುನಲ್ಲಿ ವಿಲೀನ ಗೊಳಿಸಿ ನಂತರ ಜಾರ್ಜ್ ಗೇ ತಿರುನಾಮ ಹಾಕಿದವನು ಈ ಪುಣ್ಯಾತ್ಮ ನಿತೀಶ್..

    ReplyDelete